![]() |
| ಕೃಪೆ: |
ಇಂದು ನೀ ಕಾಲೇಜಿಗೆ ಬರಬೇಕಿತ್ತು ಮಾರಾಯ್ತಿ, ಕಾವ್ಯ ಓದುತ್ತಾ ನೋವ ಮರೆಯಬಹುದಿತ್ತು. ಒಂದಷ್ಟು ಹರಟಬಹುದಿತ್ತು. ನೀನೊಂದು ದೀಪವಾಗಬೇಕಿತ್ತು ಹುಡುಗಿ. ಎಂದಿನಂತೆ ಮುಗುಳ್ನಗೆ ಹೊತ್ತು ಮನೆಗೆ ಮರಳಬೇಕಿತ್ತು. ಆತ್ಮಹತ್ಯೆ ಹೇಡಿತನ ಎಂದು ಬೋಧಿಸುವ ನನಗೆ ಕೊನೆಗೂ ನೀ ಏನೆಂದೇ ತಿಳಿಯದಾದೆ. ಈ ಸಮಾಜ, ಶಿಕ್ಷಣ ವ್ಯವಸ್ಥೆ, ಕಡೆಗೆ ಪಾಠ ಹೇಳುವ ನನ್ನ ಮೇಲೂ ಅರ್ಥವಾಗದ ಬೇಸರಕಣೇ ಗೆಳತಿ, ಹೇಳಿಕೊಳ್ಳಲಾರದ ನೋವು ಅಂಥದ್ದೇನಿತ್ತು?
ಸಾಹಿತ್ಯವನ್ನು ಓದಬೇಕು ಒಂದಷ್ಟು ಖುಷಿಗೆ, ಸಾಂತ್ವನಕ್ಕೆ, ನಮ್ಮಷ್ಟಕ್ಕೆ ನಾವು ಗಟ್ಟಿಗೊಳ್ಳಲು... ಹೀಗೇ ಏನೇನೋ ಅಂದುಕೊಳ್ಳುತ್ತೇನೆ ನಾನು. ಆದರೆ ನೀ ನನ್ನೆಲ್ಲ ನಂಬಿಕೆಗಳಾಚೆ ಹೊರಟುಬಿಟ್ಟೆ. ಕಾಲ ನಿಲ್ಲುವುದಿಲ್ಲ; ಬದುಕು, ನೋವು, ಸಂಕಟಗಳೂ ಕೂಡ. ಇಂದಿನ ನೋವು, ಸಂಕಟಗಳ ನುಂಗದ ಹೊರತು ನಮ್ಮ ನಾಳೆಗಳು ಅರಳುವುದಿಲ್ಲವಲ್ಲ? ಬದುಕಬೇಕು ಇಲ್ಲಿ ಹಣತೆ ಹಚ್ಚುವವರು ಮತ್ತು ಹಣತೆಯಾಗುವವರು, ಬೆಳಗಬೇಕು ಎಲ್ಲರೂ ಈ ಭುವಿಯನ್ನು.

